ಹೊತ್ತದು ಗೋಧೂಳಿ
ಹುಡಿಮಣ್ಣು ಅಮರಿ
ಬಿಸಿಲ ಕೋಲ ಕರಗಿ,
ನವಿಲ ನಲಿವ ಸಮಯ
ಅದ್ಯಾವ ಗಳಿಗೆಯೋ
ಹಸಿ ಜಾರಿತು ಅರಿಶಿಣ
ಸವರಿದ ಚಂದನ...
ಕಣ್ಣಂಚಿಗಿಲ್ಲ ಮಿಂಚು
ತೀಡಿದರೂ
ಕಾಡಿಗೆ.
ತುಸ ಸಪ್ಪೆಯೇ ತುಟಿ
ಜೇನ ಸವರಿ
ಕೆಂಗುಲಾಬಿ
ಸೋಕಿಸಿದರೂ.
ತುಸು ಹೆಚ್ಚಾಯಿತೇ?
ಎನ್ನುತ್ತ ಹಚ್ಚಿದ
ರಂಗೂ ತಂದಿಲ್ಲ
ಮೆರಗು ಕೆನ್ನೆಗೆ.
ಮುತ್ತಲ್ಲ, ಹವಳಲ್ಲ
ವಜ್ರದಾ ತುಣಕೊಂದ
ಗಿಣಿಮೂಗಿಗಿಟ್ಟರೂ
ಹೊಳಪಿಲ್ಲ ಅದಕೆ.
ಕಳೆಯಿಲ್ಲ ಮೊಗಕೆ.
ಅಲ್ಲೊಬ್ಬ ಬಂದ.
ಗುಬ್ಬಚ್ಚಿ ಗೂಡಿಗೂ
ಬಾವಲಿಗಳ ಜೋಕಾಲಿಗೂ
ಹದವಾಗಿತ್ತು ತಲೆ
ಹಿತವಾಗಿತ್ತು ಗಡ್ಡ.
ಅಂದೆಂದೋ ತೊಟ್ಟಿದ್ದ
ಅಂಗಿಗೂ, ಹೆಗಲಿಗಂಟಿದ ಚೀಲಕ್ಕೂ
ಬೇಸರಿಸಿತ್ತು ಅವನ ಸಂಗ.
ಅವಳ ನೋಡಿದ ಅವನಲ್ಲಿ
ಅದೆಂಥದ್ದೋ
'ಸಂಚಲನ'
ಒಣಗಿದ ಬಣ್ಣ
ಅಂಟಿದ ಕುಂಚಕೂ ಕೂಡ.
ಅವಳನೊಸಲಿಗಿಟ್ಟ ಬೊಟ್ಟ.
ಅವಳಿಗರಿವಿಲ್ಲದ, ಅವಳೊಳಗಿನ
ಹೆಣ್ತನ ದಟ್ಟ ದಿಟ್ಟ.
ಅದರೊಂದಿಗೆ ಹೊರಬಂದ
ಅವನಲ್ಲಿನ ಕಲೆಗಾರ...
-ಶ್ರೀದೇವಿ ಕಳಸದ
(ಕೆಂಡಸಂಪಿಗೆಯ ‘ದಿನದ ಕವಿ’ಯ ಮೊದಲ ಕವನ ಇದು. )
http://www.kendasampige.com/article.php?id=783
Saturday, June 7, 2008
Subscribe to:
Post Comments (Atom)
No comments:
Post a Comment