Wednesday, April 9, 2008

ನಿಮಗೂ ಹೀಗೆ ಅನಿಸಿದೆಯೆ?

ಹಲವಾರು ಬಾರಿ ಹಾಗನ್ನಿಸಿದೆ.

ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿಲ್ಲ.

ಏಕೆ ಹಾಗಾಗುತ್ತದೆ?

ನಾನು ಸತ್ಯ ಹೇಳಿದರೆ ನಮ್ಮ ಇದ್ದಬದ್ದ ಸಂಬಂಧ ಅಲ್ಲಿಗೇ ಮುಕ್ತಾಯವಾಗುತ್ತದೆ ಎಂಬುದು ನನಗೆ ಗೊತ್ತು. ಅದು ವೃತ್ತಿಪರ ಆಗಿರಬಹುದು ಅಥವಾ ವೈಯಕ್ತಿಕವಾಗಿರಬಹುದು- ಒಟ್ಟಿನಲ್ಲಿ ನಮ್ಮ ಸಂಬಂಧ ಅಂತ್ಯಗೊಳ್ಳುತ್ತದೆ.

ತುಂಬ ಸಾರಿ ನೋಡಿದ್ದೇನೆ: ಸಾಮಾನ್ಯವಾಗಿ ದಡ್ಡರು ಉನ್ನತ ಸ್ಥಾನದಲ್ಲಿ ಕೂತಿರುತ್ತಾರೆ. ಪ್ರತಿಭಾವಂತರನ್ನು ಕಂಡರೆ ಅವರಿಗೆ ಅಸೂಯೆ, ಕೀಳರಿಮೆ. ಅದನ್ನು ಹೋಗಲಾಡಿಸಲು ಗತ್ತು ನಟಿಸುತ್ತಾರೆ. ತಮಗೆ ಎಲ್ಲದೂ ಗೊತ್ತಿದೆ ಎಂಬ ಮುಖವಾಡ ತೊಡುತ್ತಾರೆ. ಅದೇ ಹೊತ್ತಿಗೆ, ತನ್ನ ಹುಳುಕು ಯಾರಿಗಾದರೂ ಗೊತ್ತಾದರೆ ಹೇಗೆ ಎಂಬ ಅಳುಕೂ ಅವರನ್ನು ಕಾಡುತ್ತಿರುತ್ತದೆ. ಹೀಗಾಗಿ, ಕೆಲಸ ಗೊತ್ತಿರುವವರನ್ನು ಕಂಡರೆ ಭಯ. ಅವರನ್ನು ಕಾಡಲು ಶುರು ಮಾಡುತ್ತಾರೆ. ಅವರು ಮಾಡಿದ್ದೆಲ್ಲ ತಪ್ಪು ಎನ್ನುತ್ತಾರೆ. ಬೆಳೆಯಲು ಸಾಧ್ಯವಿರುವ ಬಾಗಿಲುಗಳನ್ನೆಲ್ಲ ಮುಚ್ಚುತ್ತಾರೆ. ತಾವಿಲ್ಲದಾಗ ಬಾಗಿಲು ತೆಗೆದುಕೊಂಡು ಬಂದರೆ? ಎಂಬ ಅಳುಕಿನಿಂದಾಗಿ, ಹೊರಗೇ ಕಾವಲು ನಿಲ್ಲುತ್ತಾರೆ.

ಇದು ನಿಜಕ್ಕೂ ದುರ್ಭರ ಪರಿಸ್ಥಿತಿ. ಅವಕಾಶ ನಿರಾಕರಿಸಲ್ಪಟ್ಟ ವ್ಯಕ್ತಿಯೂ ಬೆಳೆಯುವುದಿಲ್ಲ, ಆತನ ಕಾವಲಿಗೆ ನಿಂತವನೂ ಬೆಳೆಯಲಾರ. ಇಂಥ ಪರಿಸ್ಥಿತಿ ಉಂಟಾದಾಗ, ಇಬ್ಬರು ವ್ಯಕ್ತಿಗಳು ಮಾತ್ರವಲ್ಲ, ಸಂಸ್ಥೆ ಕೂಡ ಹಾಳಾಗುತ್ತದೆ. ಆಗ ಏನು ಮಾಡಬೇಕು?

ನಾನು, ಮೌನವಾಗಿ ಇದ್ದುಬಿಡುತ್ತೇನೆ. ಗತ್ತು ತೋರಿಸುವವನಿಗೇ ಮೊದಲ ಬ್ಯಾಟಿಂಗ್ ಭಾಗ್ಯ ದಕ್ಕಲಿ. ಅವನದೇ ಮಾತು ನಡೆಯಲಿ. ತನ್ನ ಗತ್ತು ಮತ್ತು ಶಕ್ತಿ ಪ್ರದರ್ಶನದ ಅತಿರೇಕದಲ್ಲಿ ಆತನ ದೌರ್ಬಲ್ಯ ಬಲು ಬೇಗ ಬಯಲಾಗುತ್ತ ಹೋಗುತ್ತದೆ.

ಮೌನವಾಗಿದ್ದುಕೊಂಡು ಓದು-ಬರೆಹ ಮುಂದುವರೆಸಿಕೊಂಡು ಹೋಗುತ್ತೇನೆ. ಅದೊಂಥರಾ ವನವಾಸದ ಸುಖ. ಏನೋ ಶಾಂತಿ, ನೆಮ್ಮದಿ ತರುವ ಮೌನ. ಅಧ್ಯಯನದಲ್ಲಿ ಮುಳುಗಿದಂತೆ, ಅತ್ತ ಗತ್ತು ಯಾವತ್ತೋ ಕರಗಿರುತ್ತದೆ. ಹುಳುಕು ಹೊರಬಿದ್ದಿರುತ್ತದೆ. ಒಮ್ಮೊಮ್ಮೆ ವರ್ಷಗಟ್ಟಲೇ ಕಾಯಬೇಕಾಗಬಹುದು.

ಅಷ್ಟೊಂದು ಸಮಾಧಾನ/ಅನಿವಾರ್ಯತೆ ನನಗಿದ್ದರೆ ಕಾಯುತ್ತೇನೆ. ಇಲ್ಲದಿದ್ದರೆ, ಎದ್ದು ಹೋಗುತ್ತೇನೆ.ಏಕೆಂದರೆ, ಬದುಕಿನಲ್ಲಿ ಮುಚ್ಚಿದ ಬಾಗಿಲುಗಳಿಗಿಂತ ತೆರೆದ ಬಾಗಿಲುಗಳೇ ಹೆಚ್ಚು. ಅದು ನನ್ನ ನಂಬಿಕೆಯಷ್ಟೇ ಅಲ್ಲ, ಅನುಭವವೂ ಹೌದು.

- ಚಾಮರಾಜ ಸವಡಿ

ಕಚೇರಿ ಎಂದರೆ ಸುಮ್ಮನೇನಾ?


ಅದೊಂದು ಕಚೇರಿ. ತನ್ನದೇ ಲೆಕ್ಕದಲ್ಲಿ ಅದೊಂದು ಪ್ರತ್ಯೇಕ ಜಗತ್ತು.

ಹಾಗಂದರೆ, ಅಲ್ಲಿ ಎಲ್ಲವೂ ಉಂಟು ಎಂದರ್ಥ. ಒಳ್ಳೆಯವರು, ಕೆಟ್ಟವರು, ಕೆಲಸಗಾರರು, ಸೋಮಾರಿಗಳು, ಶೂನ್ಯ ಪ್ರತಿಭೆಗಳು, ಮೊದ್ದುಮಣಿಗಳು, ಪೆದ್ದು ಮುಂಡೆಯರು- ಹೀಗೆ ಎಲ್ಲರೂ ಇರುತ್ತಾರೆ. ಕೆಲವರು ಕೆಲಸ ಮಾಡುತ್ತಲೇ ಇರುತ್ತಾರೆ. ಅದು ಮುಗಿಯುವುದೇ ಇಲ್ಲ. ಇನ್ನು ಕೆಲವರು ಹಾಗೇ ಕೂತಿರುತ್ತಾರೆ, ಅವರ ಕೆಲಸ ಪ್ರಾರಂಭವಾಗುವುದೇ ಇಲ್ಲ.

ಇಂಥಪ್ಪ ಕಚೇರಿಯಲ್ಲಿ ಹಲವಾರು ದೃಶ್ಯಗಳು ನಿತ್ಯ ನಡೆಯುತ್ತವೆ. ಕೆಲವೊಂದು ಪುನರಾವರ್ತನೆಯಾದರೆ, ಇನ್ನು ಕೆಲವು ನಿರೀಕ್ಷಿತ. ಅಪರೂಪಕ್ಕೊಮ್ಮೆ ಅನಿರೀಕ್ಷಿತ ಘಟನೆಗಳು ನಡೆಯುವುದುಂಟು.

ಒಳ ಬರುತ್ತಲೇ ಬೂಟಾಟಿಕೆಯ ವಾಸನೆ ಬಡಿಯುವುದಷ್ಟೇ ಅಲ್ಲ, ಕಣ್ಣೆದುರು ರಾಚಲೂತೊಡಗುತ್ತದೆ. ’ನಿನ್ನೆ ಪಾರ್ಟಿಗೆ ಹೋಗಿದ್ದೆ ಕಣೆ, ಏನ್‌ ಚೆನ್ನಾಗಿತ್ತು ಅಂತೀಯಾ’ ಎಂದು ಲಲನೆಯೊಬ್ಬಳು ಹೇಳುತ್ತಿದ್ದರೆ, ಅವಳ ಗೆಳತಿಯರ ಪೈಕಿ ಒಬ್ಬಿಬ್ಬರು ಮುಖವರಳಿಸಿ ಕೇಳಿಸಿಕೊಂಡರೆ, ಉಳಿದವರು ತಮ್ಮ ಕೆಲಸದಲ್ಲಿ ಬಿಜಿಯಾಗಿರುವ ನಟನೆ ಮಾಡುತ್ತಲೇ ಕಿವಿ ಅತ್ತ ತೇಲಿಬಿಟ್ಟಿರುತ್ತಾರೆ. ಇನ್ನೊಂದೆಡೆ, ಬ್ರೆಕಿಂಗ್‌ ನ್ಯೂಸ್‌ ಕೊಡುವ ಇರಾದೆಯಲ್ಲಿ ವರದಿಗಾರ ಗಂಭೀರತೆ ನಟಿಸುತ್ತ ಸರಭರ ಓಡಾಡುತ್ತಿರುತ್ತಾನೆ. ಸರಿಯಾಗಿ ಹುಡುಕಿದರೆ, ಅಂದಿನ ದಿನಪತ್ರಿಕೆಯ ಯಾವುದೋ ಒಂದೆಡೆ, ’ಬ್ರೆಕಿಂಗ್‌ ನ್ಯೂಸ್‌’ ಸುಳಿವು ಸಿಗುತ್ತದೆ.

ಎಲ್ಲರಿಗಿಂತ ತಡವಾಗಿ ಹಿರಿಯ ತಲೆಗಳು ಬರುತ್ತವೆ. ಜಗತ್ತಿನ ಭಾರವೆಲ್ಲ ತಮ್ಮ ತಲೆಯ ಮೇಲಿದೆ ಎಂಬಂತೆ ಮುಗುಳ್ನಗು ಮನೆಯಲ್ಲಿಟ್ಟು, ಗಂಭೀರವದನರಾಗಿ ಬರುತ್ತಾರೆ. ಬಂದವರೇ ಬ್ಯಾಗಿಟ್ಟು, ಕಾರಣವಿಲ್ಲದೇ ಆ ಕಡೆಯಿಂದ ಈ ಕಡೆ ಓಡಾಡುತ್ತಾರೆ. ಸುಳ್ಳು ಸುಳ್ಳೇ ಕಂಪ್ಯೂಟರ್ ಪರದೆಗಳನ್ನು ದಿಟ್ಟಿಸುತ್ತಾರೆ. ಸಹೋದ್ಯೋಗಿಗಳನ್ನು ಕರೆಯುತ್ತಾರೆ. ಅರ್ಥವಿಲ್ಲದ ವಿಷಯಗಳನ್ನು ಮಾತನಾಡಿ ಅವರಲ್ಲಿ ಗೊಂದಲ ಮೂಡಿಸುತ್ತಾರೆ. ಇದ್ದಕ್ಕಿದ್ದಂತೆ ಅವರನ್ನು ಅದೇ ಸ್ಥಿತಿಯಲ್ಲಿ ಬಿಟ್ಟು, ಇನ್ನಿಲ್ಲದ ಸೀರಿಯೆಸ್‌ನೆಸ್‌ನಲ್ಲಿ ಕಂಪ್ಯೂಟರ್ ತೆರೆ ಮೇಲೆ ದೃಷ್ಟಿ ಇಟ್ಟು ಕೂತುಬಿಡುತ್ತಾರೆ.

’ಅರೆರೆ, ನೀವು ನಮ್ಮ ಬಾಸ್‌ ಬಗ್ಗೆ ಹೇಳುತ್ತಿಲ್ಲ ತಾನೆ?’ ಎಂದು ನಿಮಗೆ ಅನ್ನಿಸಿದರೆ, ಅಚ್ಚರಿ ಬೇಡ. ಮಿತ್ರರೇ, ಎಲ್ಲರ ಬಾಸ್‌ಗಳೂ ಸಾಮಾನ್ಯವಾಗಿ ಇರೋದೇ ಹೀಗೆ. ಎಲ್ಲೋ ಓದಿದ ವಾಕ್ಯವೊಂದು ಈ ಸಂದರ್ಭದಲ್ಲಿ ನೆನಪಾಗುತ್ತಿದೆ: ನಮಗಿಂತ ದಡ್ಡರು, ತಿಕ್ಕಲರು, ಪೆದ್ದರು, ಮೂರ್ಖರು, ದುಷ್ಟರು, ಅತ್ತೆ ಮನಃಸ್ಥಿತಿಯವರು ಸಾಮಾನ್ಯವಾಗಿ ನಮ್ಮ ಸೀನಿಯರ್‍ ಆಗಿರುತ್ತಾರಂತೆ. ಅನುಮಾನ ಬಂದರೆ ಕೊಂಚ ಗಮನಿಸಿ ನೋಡಿ: ನಮ್ಮ ಬಹುತೇಕ ಸೀನಿಯರ್‌ಗಳು ಹೀಗೆ ತಾನೇ ಇರೋದು!

ನೀವು ಉತ್ತಮ ವಿಚಾರ ಹೇಳಿದರೆ, ಆ ಮನುಷ್ಯನಿಗೆ ಕೇಳಿಸಿಕೊಳ್ಳುವ ಸಹನೆಯೂ ಇರುವುದಿಲ್ಲ. ’ಮೊದಲು ನಾನು ಹೇಳೋದು ಕೇಳಿ’ ಎಂದೋ, ’ಅದೆಲ್ಲ ನಡೆಯೋಲ್ಲ’ ಎಂದೋ, ’ಅದನ್ನು ಮಾಡುತ್ತ ಕೂತರೆ ತಡವಾಗುತ್ತದೆ’ ಎಂದೋ ತನ್ನ ಕೆಳಮಟ್ಟದ ಐಡಿಯಾವನ್ನೇ ಹೇರಿ ಹೋಗುತ್ತಾನೆ. ಮನಸ್ಸಿಲ್ಲದಿದ್ದರೂ ನೀವು ಅದನ್ನೇ ಮಾಡಬೇಕು.ಸಾಮಾನ್ಯವಾಗಿ, ಯಾವ ಕಚೇರಿಯಲ್ಲೂ ಹೊಸ ವಿಚಾರಗಳನ್ನು ಸ್ವಾಗತಿಸುವುದಿಲ್ಲ. ನೀವು ಬಾಸ್‌ಗಿಂತ ಜಾಣರಾಗಿದ್ದರೆ ದಯವಿಟ್ಟು ಅದನ್ನು ತೋರಿಸಿಕೊಳ್ಳಬೇಡಿ. ಬಾಸ್‌ ತಪ್ಪು ಮಾಡಿದ್ದರೆ, ಮಾಡುತ್ತಿದ್ದರೆ ಯಾವ ಕಾರಣಕ್ಕೂ ಬಾಯಿ ಬಿಡಬೇಡಿ. ಅದರಿಂದ ನಿಮಗೆ ಕಷ್ಟ ಕಟ್ಟಿಟ್ಟ ಬುತ್ತಿ.

ಇಂಥ ಹಲವಾರು ಘಟನೆಗಳನ್ನು ಇನ್ನು ಮುಂದೆ ವಿವರವಾಗಿ ಬರೆಯುತ್ತ ಹೋಗುತ್ತೇನೆ. ಅದಕ್ಕೂ ಮುನ್ನ ಒಂದು ಸಲಹೆ: ಸಾಧ್ಯವಾದರೆ 'ಒನ್‌ ನೈಟ್‌ ಎಟ್‌ ಕಾಲ್‌ ಸೆಂಟರ್‌’ ಎಂಬ ಪುಸ್ತಕ ಸಿಕ್ಕರೆ ಓದಿ. ಇಂಥ ಕಚೇರಿ, ಅಂಥ ಬಾಸ್‌ಗಳ ಬಗ್ಗೆ ಉತ್ತಮ ವಿವರಣೆ ಇದೆ ಅದರಲ್ಲಿ.

- ಚಾಮರಾಜ ಸವಡಿ